ದ್ವಿತೀಯ ಪಿ.ಯು ಫಲಿತಾಂಶದಲ್ಲಿ ಸಂಕಲ್ಪ ಪ.ಪೂ ಕಾಲೇಜಿನ ಶೇ 90 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಗಂಗಾವತಿ: ಗಂಗಾವತಿ ನಗರದ ಸಂಕಲ್ಪ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಮಾರ್ಚ್‌‌ 2026 ರ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಶೆಕಡಾ 90% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಅಮೋಘ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಅಮೋಘಗೌಡ ತಂದೆ ಸೂರ್ಯಪ್ರಕಾಶಗೌಡ 582, (97%)., ಜಿ ನಿಶ್ಚಿತಾ ತಂದೆ ರಾಘವೇಂದ್ರ 568 (94.67%)., ದ್ರಾಕ್ಷಾಯಿಣಿ ತಂದೆ ರಾಮಣ್ಣ 558 (93%), ಅದೇರೀತಿ ಕಲಾ ವಿಭಾಗದಲ್ಲಿ ಅಕ್ಷೀತಾ ತಂದೆ ಆನಂದ 573 (95.50%), ಚೈತ್ರ ತಂದೆ ಭಿಮಣ್ಣ 572 (95.33%), ವೀರಭದ್ರಪ್ಪ ತಂದೆ ಸೊಮಪ್ಪ 567 (94.50%) ಈ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, 32 ಕ್ಕಿಂತ ಅಧಿಕ ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು ಹಾಗೂ 11 ವಿದ್ಯಾರ್ಥಿಗಳು ವಿಷಯವಾರು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.

ಒಟ್ಟು 220 ವಿದ್ಯಾರ್ಥಿಗಳಲ್ಲಿ 200 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು. ಉನ್ನತ-ಶ್ರೇಣಿಯಲ್ಲಿ-57, ಪ್ರಥಮ ದರ್ಜೆಯಲ್ಲಿ-121, ದ್ವಿತೀಯ ದರ್ಜೆಯಲ್ಲಿ-20, ತೃತೀಯ ದರ್ಜೆಯಲ್ಲಿ-02 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

ಉತ್ತಮ ಫಲಿತಾಂಶವನ್ನು ಪಡೆಯುವ ಮೂಲಕ ಕಾಲೇಜಿನ ಕೀರ್ತಿಗೆ ಕಾರಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ, ಪ್ರಾಚಾರ್ಯರಾದ ಡಾ. ಎಂ.ಆರ್. ಮಂಜುಸ್ವಾಮಿ, ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಹೇಮಂತರಾಜ ಕೆ., ನಾಗರಾಜ ಗುತ್ತೆದಾರ, ಬಸವರಾಜ ಎಲ್., ಮಲ್ಲಿಕಾರ್ಜುನ ಸಿಂಗನಾಳ, ಅಮಿತಕುಮಾರ ರಡ್ಡಿ ಹಾಗೂ ಕಾಲೇಜಿನ ಉಪನ್ಯಾಸಕರು ಅಭಿನಂದನೆಗಳನ್ನು ತಿಳಿಸಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.  https://aratt.ai/@vishwaroopa_news_blog

ದ್ವಿತೀಯ ಪಿ.ಯು.ಸಿ ಫಲಿತಾಂಶದಲ್ಲಿ ಕೊಟ್ಟೂರೇಶ್ವರ ಸಂಯುಕ್ತ ಪ.ಪೂ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಗಂಗಾವತಿ: ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಶ್ರೀ ಕೊಟ್ಟೂರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಪಂಪಾನಗರ ಗಂಗಾವತಿ ಸದರಿ ವಿದ್ಯಾಲಯದ ೨೦೨೬ ರ ಪಿ.ಯು.ಸಿ ದ್ವಿತೀಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶೇಕಡಾವಾರು ೮೯.೪೭ ಇರುತ್ತದೆ. ೧೨ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೫೬ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ೩೧ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ ೦೧ ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.

ಕಲಾ ವಿಭಾಗದಲ್ಲಿ ಸುನೀತಾ ನೇಮಪ್ಪ ೫೬೭ ಅಂಕ, ರೇಖಾ ಯಮನೂರಪ್ಪ ೫೬೦, ಅನೀಲಕುಮಾರ ೫೪೯ ಅಂಕಗಳನ್ನು ಪಡೆದಿದ್ದರೆ, ವಾಣಿಜ್ಯ ವಿಭಾಗದಲ್ಲಿ ರಾಹುಲ್ ಜಾಧವ ೫೮೧, ಸೋಮೇಶ ರಮೇಶ ೫೭೯, ನಿಖಿತಾ ಚವ್ಹಾಣ ೫೩೮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಸಂಸ್ಥೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮ.ನಿ.ಪ್ರ ಡಾ. ಕೊಟ್ಟೂರು ಮಹಾಸ್ವಾಮಿಗಳು, ಕಾರ್ಯದರ್ಶಿಗಳಾದ ಶರಣೇಗೌಡ ಮಾಲಿಪಾಟೀಲ್ ಮತ್ತು ಪ್ರಾಚಾರ್ಯರಾದ ಚಂದ್ರಶೇಖರ ಹಾಗೂ ಬೋಧಕ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ.  https://aratt.ai/@vishwaroopa_news_blog

ಕೊಪ್ಪಳ ತಾಲೂಕು 2ನೇ ಸಮ್ಮೇಳನಾಧ್ಯಕ್ಷರಾಗಿ ಶ್ರೀನಿವಾಸ ಚಿತ್ರಗಾರ ಆಯ್ಕೆ: ಗುಡಿಕೋಟಿ

ಗಂಗಾವತಿ: ಕೊಪ್ಪಳ ತಾಲೂಕು 2ನೇ ಚುಟುಕು ಸಾಹಿತ್ಯ ಸಮ್ಮೇಳನವು ಬರುವ ಮೇ ತಿಂಗಳ ಕೊನೆವಾರದಲ್ಲಿ ಕೊಪ್ಪಳ ನಗರ ಅಥವಾ ಗ್ರಾಮೀಣ ಭಾಗದಲ್ಲಿ ನಡೆಸಲು ತೀರ್ಮಾನಿಸಿದ್ದು, ಈ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಶಿಕ್ಷಕರು ಹಾಗೂ ಕವಿಗಳಾದ ಶ್ರೀನಿವಾಸ ಚಿತ್ರಗಾರ ಅವರನ್ನು ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಗಂಗಾವತಿ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಹೇಳಿದರು.

ಈ ಪೂರ್ವಭಾವಿ ಸಭೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಡಾ. ಮಹಾಂತೇಶ್‌ ನೆಲಾಗಣಿ, ತಾಲೂಕು ಅಧ್ಯಕ್ಷ ಮೈಲಾರಪ್ಪ ಉಂಕೀ, ಪದಾಧಿಕಾರಿಗಳಾದ ಶಿವಪ್ರಸಾದ ಹಾದಿಮನಿ, ಶಿವಪ್ಪ ಕೋಗಳಿ, ಬಸವಶ್ರೀ ಸೋಮನಾಳ ಇತರರು ಹಾಜರಿದ್ದರು.

ಶ್ರೀನಿವಾಸ ಚಿತ್ರಗಾರ ಅವರು ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದವರಾಗಿದ್ದು, ಇವರು ಯತ್ನಟ್ಟಿಯ ಸ.ಹಿ.ಪ್ರಾ ಶಾಲೆಯಲ್ಲಿ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಇವರು ಒಬ್ಬ ಹಿರಿಯ ಕವಿಯಾಗಿ 15ಕ್ಕೂ ಅಧಿಕ ಮಕ್ಕಳ ಸಾಹಿತ್ಯ ಸೇರಿದಂತೆ ಇತರ ಪುಸ್ತಕಗಳನ್ನು ಹೊರತಂದಿದ್ದಾರೆ. ಅಲ್ಲದೇ ವಿವಿಧ ಕವಿಗೋಷ್ಠಿಯಲ್ಲಿ ಹಾಗೂ ಸಭೆ ಸಮಾರಂಭಗಳಲ್ಲಿ ಉದ್ಘಾಟಕರಾಗಿ, ಅಧ್ಯಕ್ಷರಾಗಿ, ಉಪನ್ಯಾಸಕರಾಗಿ ಭಾಗವಹಿಸಿದ್ದಾರೆ. ಸ್ಥಳೀಯ ಸಾಹಿತ್ಯ ಸಮ್ಮೇಳನಗಳ ಕೆಲವು ಸ್ಮರಣ ಸಂಚಿಕೆಗಳಲ್ಲಿ ಸಂಪಾದಕ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರನ್ನು ಕೊಪ್ಪಳ ತಾಲೂಕು 2ನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು.  https://aratt.ai/@vishwaroopa_news_blog

ಮಹಾದoಡನಾಯಕರ ಸ್ಮರಣೋತ್ಸವದ ಕಾರ್ಯಕರ್ತರಿಗೆ ಮತ್ತು ದಾಸೋಹಿಗಳಿಗೆ ಗೌರವ ಸಮರ್ಪಣೆ.

ಎಲ್ಲ ಆಯಾಮಗಳಿoದಲೂ ಯಶಸ್ವಿಯಾದ ದಾಖಲೆ ಸಮಾರoಭ: – ಡಾ.ಶಿವಕುಮಾರ ಮಾಲಿಪಾಟೀಲ್‌

ಗಂಗಾವತಿ: ಬಹುತೇಕ ಯಾವುದೇ ಸಮಾರoಭಗಳಲ್ಲಿ ಒoದಿಲ್ಲೊoದು ಅಡೆತಡೆಗಳಾಗುತ್ತವೆ. ಅದು ಪ್ರಕೃತಿಯಿoದಾಗಬಹುದು ಮಾಡಿದ ಅಡುಗೆಯಲ್ಲಿ ವ್ಯತ್ಯಾಸವಾಗಬಹುದು. ಎಲ್ಲವೂ ಸರಿಯಾಗಿದ್ದರೂ ವೇದಿಕೆಯಲ್ಲಿರುವ ಅತಿಥಿಗಳಲ್ಲಿ ಯಾರೋ ಒಬ್ಬರ ವಿವಾದಾತ್ಮಕ ಹೇಳಿಕೆಯಿoದ ಸಭೆಯಲ್ಲಿ ಕೆಲವೊಮ್ಮೆ ಗೊoದಲಗಳಾಗಬಹುದು. ಆದರೆ ಯಾವುದೇ ಆಯಾಮಗಳಿoದಲೂ ತೊoದರೆಗಳಾಗದೆ ಅತ್ಯoತ ಯಶಸ್ವಿಯಾಗಿ ನಡೆದ ಸಮಾರoಭ ಮಾ-22 ರoದು ಗoಗಾವತಿಯಲ್ಲಿ ನಡೆದ ಮಹಾದoಡನಾಯಕರ ಸ್ಮರಣೋತ್ಸವ ಸಮಾರoಭ ಎoದು ಲಯನ್ಸ್ ಕ್ಲಬ್‌ನ ಅದ್ಯಕ್ಷರು, ಪರಿಸರ ಪ್ರೇಮಿಗಳಾದ ಡಾ|| ಶಿವಕುಮಾರ್ ಮಾಲಿಪಾಟೀಲ್ ಅಭಿಪ್ರಾಯಪಟ್ಟರು.ಅವರು ರಾಷ್ಟ್ರೀಯ ಬಸವದಳದ ಗುರುಬಸವ ಮoಟಪದಲ್ಲಿ ಜರುಗಿದ ಸ್ಮರಣೋತ್ಸವ ಸಮಾರoಭದ ಯಶಸ್ಸಿಗೆಶ್ರಮಿಸಿದವರಿಗೆ ನಡೆದ ಸನ್ಮಾನ ಸಮಾರoಭದಲ್ಲಿ ಮಾತನಾಡುತ್ತಾ, ಈ ಯಶಸ್ಸಿನಲ್ಲಿ ವೀರೇಶ ಅವರನ್ನೊಳಗೊoಡoತೆ ಎಲ್ಲರ ಸಮರ್ಪಣಾ ಸೇವೆ ಇದೆ ಎoದುದಲ್ಲದೆ ಯಾರಿoದಲೂ ದೇಣಿಗೆ ತೆಗೆದುಕೊಳ್ಳದ ಈ ಕಾರ್ಯಕ್ರಮಕ್ಕೆ ನಾನು ಖುಷಿಯಿoದ ಐದು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಹೇಳಿದರು.

ನಾಗನಗೌಡ ಶಿಕ್ಷಕರು, ನೀಲಾoಬಿಕಾ ಮಹಿಳಾ ಸoಘದ ಅರೇಗಾರ ರತ್ನಮ್ಮ, ಕೊಪ್ಪಳದ ಸoಕಪ್ಪ ಅಮರಾಪುರ, ಪಾಮಯ್ಯ ಶರಣರು ಕoಪ್ಲಿ, ಬಸವಕೇoದ್ರದ ಅಧ್ಯಕ್ಷ ಕೆ. ಬಸವರಾಜ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕೆ. ವೀರೇಶಪ್ಪ ಇವರಿoದ ಸಾಮೂಹಿಕ ಪ್ರಾರ್ಥನೆ, ಚನ್ನಬಸಮ್ಮ ಕoಪ್ಲಿ ವಚನ ಹೇಳಿದರೆ, ರೇಣಮ್ಮ ಗೌಡರ್ ಇವರು ಮಾತಾಜಿಯವರ ಕುರಿತು ಹಾಡನ್ನು ಹಾಡಿದರು.

ಒoದೇ ವಾರದ ಅoತರದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ರಾಷ್ಟ್ರೀಯ ಬಸವದಳ, ಲಿoಗಾಯತ ಧರ್ಮ ಮಹಾಸಭಾ ಕ್ರಾoತಿಗoಗೋತ್ರಿ ಅಕ್ಕ ನಾಗಲಾoಬಿಕಾ ಗಣ ಬೀದರ, ಕಲಬುರಗಿ, ಬೆಳಗಾವಿ ಮತ್ತು ಬಸವ ಚಿoತನಪ್ರಭೆ ಆದ್ಯಾತ್ಮಿಕ, ಸಾಮಾಜಿಕ ಜಾಲತಾಣ ಕೊಪ್ಪಳ ಇವರು ಮುತುವರ್ಜಿವಹಿಸಿ ಮಾಡಿಸಿದ ಅಭಿನoದನೆಯ ನೆನಪಿನ ಕಾಣಿಕೆಗಳನ್ನು ಬಸವಕೇoದ್ರ ಮತ್ತು ಉಳಿದ ಆಯೋಜಕರಿಗೆ ಪ್ರಧಾನ ಮಾಡಿ ಮಾತನಾಡಿದ ಜಿಲ್ಲಾ ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ಸತೀಶ ವಿ. ಮoಗಳೂರ ಇವರು ಸ್ಮರಣೋತ್ಸವ ಹಾಗೂ ರಾಷ್ಟ್ರೀಯ ಬಸವದಳ ಸಮಾವೇಶದ ಜೊತೆಗೆ ಇದನ್ನು ಲಿoಗಾಯತ ಧರ್ಮದ ವಿಜಯೋತ್ಸವ ಎoದು ಕರೆಯಬಹುದಾಗಿದೆ ಎoದು ಹೃದಯತುoಬಿ ಹೇಳಿದರು.

ಅಧ್ಯಕ್ಷರಾದ ದಿಲೀಪಕುಮಾರ ವoದಾಲ, ಕೊಪ್ಪಳದ ಸುವರ್ಣ ಲಿoಗನಗೌಡ, ಗುರುರಾಜ, ಅಲ್ಲದೆ ಬಸವಜ್ಯೋತಿ, ವಿನಯಕುಮಾರ ಅoಗಡಿ, ಮಲ್ಲಿಕಾರ್ಜುನ ಅರಳಹಳ್ಳಿ, ವಿಜಯಲಕ್ಷ್ಮಿ ಹೊಮ್ಮಿನಾಳ, ರಾಜೇಶ್ವರಿ ಇನ್ನೂ ಹಲವಾರು ಶರಣ ಶರಣೆಯರು ಭಾಗವಹಿಸಿದ ಸಮಾರoಭವು ಅತ್ಯoತ ಯಶಸ್ವಿಯಾಗಿ ಜರುಗಿತು.https://aratt.ai/@vishwaroopa_news_blog

ಮೌನ ಸಾಧಕರಾಗಿ ಒಳಿತನ್ನು ಮಾಡಿ: ಹೆಚ್.ಎಸ್. ಪ್ರತಿಮಾ ಹಾಸನ್

ಹಾಸನ: ಮಾರ್ಚ್‌-14 ರಂದು ಹಾಸನದ ಹೌಸಿಂಗ್ ಬೋರ್ಡ್, ಚನ್ನಪಟ್ಟಣದಲ್ಲಿ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ತಾಲೂಕು ಅಧ್ಯಕ್ಷರಾದ ರಮ್ಯಾರವರ ನಿವಾಸದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಹಾಸನದ ಹೆಮ್ಮೆಯ ಪುತ್ರಿಯಾಗಿರುವ ಸಾಹಿತಿ, ಸಮಾಜ ಸೇವಕಿ, ಶಿಕ್ಷಕಿ, ಪತ್ರಕರ್ತೆ, ಸಾಮಾಜಿಕ ಚಿಂತಕಿ, ನೂರಾರು ಪ್ರಶಸ್ತಿಗಳನ್ನು ಪಡೆದಿರುವ ಸಾಧಕಿ, ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ (ರಿ ) ಸಂಸ್ಥಾಪಕ ಅಧ್ಯಕ್ಷರಾಗಿರುವ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ರವರನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಡಿ ಅವರನ್ನು ಎಲ್ಲ ಮಹಿಳೆಯರು ಅರಿಶಿಣ ಕುಂಕುಮ, ಬಳೆ. ಸೀರೆ ಜೊತೆಗೆ ಬಾಗಿನ ನೀಡಿ ಅವರ ಸಾಧನೆಯ ಹಲವಾರು ಪ್ರಶಸ್ತಿ ಪಡೆದ ಭಾವಚಿತ್ರವಿರುವ ಫಲಕ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ನಂತರ ಬದುಕು ಎಂದ ಮೇಲೆ ಜೀವನದಲ್ಲಿ ಏರುಪೇರು ಸಹಜ. ಕಷ್ಟ ಸುಖ ಎಂಬುದು ಎಲ್ಲರ ಬದುಕಿನಲ್ಲಿ ಬರುತ್ತದೆ. ಕೈಲಾದಷ್ಟು ಸಹಾಯವನ್ನು ಕಷ್ಟದಲ್ಲಿ ಇರುವವರಿಗೆ, ಅಂಗವಿಕಲರು, ನೊಂದವರಿಗೆ, ನಿರ್ಗತಕರಿಗೆ ಮಾಡಬೇಕು ಮಾಡುವ ಕೆಲಸವಾಗಲಿ ಸಾಧನೆ ಆಗಲಿ ಮೌನದಲ್ಲಿ ಸಾಗಬೇಕು, ಎಂದಿಗೂ ಮೌನ ಸಾಧಕರಾಗಿ ಒಳಿತನ್ನು ಮಾಡುತ್ತಾ ಸಾಗಿದರೆ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಹೇಳುತ್ತಾ ಮಹಿಳೆಯರು ಪ್ರಬಲರಾಗಿ ಬದುಕಬೇಕು, ಆರ್ಥಿಕವಾಗಿ ಎಷ್ಟೇ ಪ್ರಬಲರಾದರು ದುಡಿಮೆಯನ್ನು ಮಾಡುತ್ತ ಸಾಗಿದರೆ ಸಮಾಜಕ್ಕೆ ಮಾದರಿಯಾಗಬಹುದು. ಅಷ್ಟೇ ಅಲ್ಲ ಮಹಿಳೆಯು ಅಬಲೆಯಲ್ಲ ಸಬಲೇ ಎಂಬ ಮಾತಿಗೆ ಎಲ್ಲಾ ಮಹಿಳೆಯರು ಸಂಸ್ಕೃತಿಯನ್ನು ಉಳಿಸುತ್ತಾ ಉಡುಗೆ-ತೊಡುಗಿಗಳಲ್ಲಿ ಬದಲಾವಣೆಗಳನ್ನು ತೋರದೆ ನಮ್ಮ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನವನ್ನು ನೀಡುತ್ತಾ ನಮ್ಮ ಸಂಸ್ಕೃತಿಗೆ ವಿರುದ್ಧ ನಡೆಯದೆ ಕಾರ್ಯವನ್ನು ನಿರ್ವಹಿಸುತ್ತಾ ಸಾಗಿದರೆ ನಮ್ಮ ಸಮಾಜ ಸುಭದ್ರವಾಗಿರುತ್ತದೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಅರಿತು ಸಾಗಬೇಕಿದೆ. ಒಟ್ಟಾರೆ ಮಹಿಳೆಯಿಂದ ಸಮಾಜ ಸುಭದ್ರತೆಯನ್ನು ಕಾಣಬಹುದಾಗಿದೆ. ಎಂದು ಹೆಚ್.ಎಸ್ ಪ್ರತಿಮಾ ಹಾಸನ್ ಅವರು ತಿಳಿಸಿದರು.

ನಂತರ ಹೆಚ್.ಎಸ್. ಪ್ರತಿಮಾ ಹಾಸನ್ ರವರ ಸಾಧನೆ ಬಹಳವಾಗಿದೆ, ಅವರು ನೂರಾರು ಮಹಿಳೆಯರಿಗೆ ಸ್ಪೂರ್ತಿದಾಯಕ ಹಾಗೂ ಮಾದರಿಯಾಗಿದ್ದಾರೆ. ನೊಂದ ಮಹಿಳೆಯರಿಗೆ ನ್ಯಾಯ ನೀಡುವುದಾಗಲಿ, ಕರಕುಶಲ ತರಬೇತಿಯಾಗಲಿ, ಸಾಹಿತಿಕವಾಗಿ ಕಾರ್ಯಕ್ರಮಗಳಾಗಲಿ ಗುರುತಿಸಿ ನಮ್ಮೆಲ್ಲರಿಗೂ ಪ್ರೋತ್ಸಾಹ ನೀಡುತ್ತಿರುವುದು ಅವರ ಸಾಧನೆಯಾಗಿ ಕಾಣುತ್ತದೆ. ಇವರು ಬಹುಮುಖ ಪ್ರತಿಭೆಯಾಗಿದ್ದು.ಯಾವುದೇ ನಿಷ್ಕಲ್ಮಶವನ್ನು ತೋರದೆ ನೇರ ನುಡಿಯ ಮಾತುಗಾರ್ತಿಯಾಗಿ ನಮ್ಮೆಲ್ಲರಿಗೂ ಗುರುವಿನಂತೆ. ಇವರನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾ ಇಂದು ನಮ್ಮಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್(ರಿ ) ವತಿಯಿಂದ ಗೌರವಿಸುತ್ತಿರುವುದು ನಮಗೆಲ್ಲ ಹೆಮ್ಮೆ ಎನ್ನಿಸುತ್ತದೆ. ಹೀಗೆ ಇವರ ಕಾರ್ಯವು ಸುಗಮವಾಗಿ ನಡೆಯಲೆಂದು ಆಶಿಸುತ್ತೇವೆ ಎಂದು ತಾಲೂಕು ಅಧ್ಯಕ್ಷರಾದ ರಮ್ಯಾ ತಿಳಿಸಿದರು.

ನಮ್ಮ ಟ್ರಸ್ಟ್ ನ ಕಾರ್ಯವು ಸುಗಮವಾಗಿ ಸಾಗುತ್ತಾ ಸಮಾಜಕ್ಕೆ ಒಳಿತನ್ನು ಮಾಡಿದರೆ ಸಾಕೆಂದು ಎಲ್ಲಾ ಟ್ರಸ್ಟ್ ನ ಸದಸ್ಯರು ತಿಳಿಸಿದರು.

ಕಾರ್ಯಕ್ರಮದಲ್ಲಿಸೌಮ್ಯ, ಅಭಿಲಾಷ, ಕಲ್ಪನಾ, ಸಂಗೀತ, ಜಯಮ್ಮ ಪ್ರವೀಣ್ ಗೌಡ, ಬೇಬಿ ರಶಿಕ,ಬೇಬಿ ದಿಯಾ ಗೌಡ ಕೆ ಆರ್. ಇನ್ನೂ ಹಲವರು ಇದ್ದರು.  https://aratt.ai/@vishwaroopa_news_blog

ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ

ಬೆಂಗಳೂರು: 50 ವರ್ಷದ ಸನಿಹದಲ್ಲಿರುವ ಬೆಂಗಳೂರಿನ ಗೆಜ್ಜಹೆಜ್ಜೆ ರಂಗತಂಡವು ಬೆಂಗಳೂರು ಸೇವಾ ಸದನ ರಂಗಮಂದಿರದಲ್ಲಿ ಮಾರ್ಚ್‌-12 ರಂದು ಯುಗಾದಿ ರಂಗ ಸಂಭ್ರಮ ನಾಟಕೋತ್ಸವ ಏರ್ಪಡಿಸಿತ್ತು.

ರಂಗಭೀಷ್ಮ ಬಿ.ವಿ ಕಾರಂತರ ಸಂಗೀತ ಸುಂಯೋಜನೆಯಲ್ಲಿ ಮೂಡಿ ಬಂದ ಗಜವದನ ಏರಂಬ ಎಂಬ ಗೀತೆಯನ್ನು ಗಣೇಶಯ್ಯನವರು ಆಡುವುದರ ಮುಖೇನ ನಾಟಕೋತ್ಸವಕ್ಕೆ ಚಾಲನೆ ನೀಡಿದರು.

ಹಲವಾರು ಪ್ರಸಿದ್ಧ ನಾಟಕಗಳ ರಂಗಗೀತೆಗಳನ್ನು ಒಂದು ಗಂಟೆಗಳ ಕಾಲ ಹಾಡಲಾಯಿತು. ತಂಡದ ಹೊಸ ಪ್ರಯೋಗ ಮಾದಕ ಯುವ ಮಾರಕ ಪ್ರದರ್ಶಿಸಲಾಯಿತು. ಯುವ ಜನತೆ ದುಶ್ಚಟಕ್ಕೆ ದಾಸರಾಗ್ತಾ ಇದ್ದಾರೆ. ಇದರ ಸುತ್ತ ಹೆಣೆಯಲಾದ ಕಥಾ ಹಂದರ ಮನುಷ್ಯ ಅನುಮಾನ ಮತ್ತು ಅವಮಾನದಿಂದ ಕೋಪ ತಾಪ ಆವೇಶ ಚಟ ಬಿದ್ದು ಚಟ್ಯಕೆ ಏರುತ್ತಾನೆ. ಬೀದಿ ಬದಿಗಳಲ್ಲಿ ಜನಸಂದಣಿ ಇರುವ ಜಾಗಗಳಲ್ಲಿ ಶಾಲಾ-ಕಾಲೇಜುನ ಸಮೀಪ ಏರ್ಪೋರ್ಟ್ ಬಸ್ಟ್ಯಾಂಡ್ ರೈಲು ನಿಲ್ದಾಣ ಮುಂತಾದ ಕಡೆಗಳಲ್ಲಿ ಗಾಂಜಾ ಅಫೀಮು ಎಲಾಯಿನ್ ಮತ್ತೇರಿಸುವ ಪದಾರ್ಥಗಳನ್ನು ಮಾರುತಿರುತ್ತಾರೆ. ಯುವಕ ಯುವತಿಯರನ್ನು ದುಶ್ಚಟಕ್ಕೆ ದಾಸರನ್ನಾಗಿಸುವ ವಂಚಕರ ಜಾಲವೇ ವಿಪರೀತವಾಗಿದೆ. ಪ್ರೇಕ್ಷಕರಿಗೆ ನೇರವಾಗಿ ಡ್ರಗ್ಸ್ ಮಾರಾಟ ಕಂಡು ಬಂದಲ್ಲಿ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಒಂದು ಪಾತ್ರ ಹೇಳುತ್ತದೆ. ಯುವ ಜನತೆಯನ್ನು ದುಸ್ಥಿತಿಯಿಂದ ಕಾಪಾಡಬೇಕಾದ ಪರಿಸ್ಥಿತಿ ಒದಗಿ ಬಂದಿರುವುದು ನೋವಿನ ಸಂಗತಿ.

ಧರೆಗೆ ತಂದು ಬಿಟ್ಬಿಟ್ನಪ್ಪ ಆಟ ಆಡ್ಸೋಕೆ ಪಾಠ ಕಲ್ಸೋಕೆ ಈ ಭೂಮಿ ಎಂಬ ರಂಗದ ಮೇಲೆ ಹಾಡೋಕ್ ಬಿಟ್ಟವ್ನೆ, ಕಾಮ ನೇಮ ಲೋಭ ಲಾಭದ ಪಾತ್ರ ಕೊಟ್ಟವ್ನೆ ಅಂತ ಹೇಳ್ತಾ ಪ್ರಹಸನ ಮುಕ್ತಾಯವಾಗುತ್ತದೆ. ನಿಂತ್ಕೋಳಿ ಅಲ್ಲಲ್ಲ ಕುಳಿತುಕೊಳ್ಳಿ ಎಂಬ ಹಾಸ್ಯ ಕಿರು ನಾಟಕ ಮತ್ತು ಎಂಡ್ ಇಲ್ಲದ ಬಂಡ್ ಅವತಾರ ರಾಜಕೀಯ ವಿಡಂಬನಾತ್ಮಕ ನಗೆ ನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ ತಂಡ.

ರಂಗ ಉಪನ್ಯಾಸ ರಂಗ ಗೀತೆಗಳು, ಕಿರು ನಾಟಕ ರಂಗದ ಬಗ್ಗೆ ಮಾತುಗಳು ರಂಗ ಹಾಸ್ಯ ಪಟಾಕಿ ಎಲ್ಲಾ ಸರಿಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿತು ಚಿಂತನೆಗೂ ಚಾಲನೆ ನೀಡಿತು. ಬೆಳಕು ವಿನ್ಯಾಸ ರವಿಶಂಕರ್ ಪ್ರಸಾದನ ಶಿವು, ಉಪನಿಷ ವಸ್ತ್ರಾಲಂಕಾರ ಪುಷ್ಪಲತಾ. ಪ್ರಚಾರ ಅಮಿತಾನಂದ ಶೇಖ ಪಾತ್ರವರ್ಗದಲ್ಲಿ ಮೈಸೂರು ರಮಾನಂದ್, ಶೇಖರ್ ಸೂರ್ಯನಾರಾಯಣರಾವ್, ಲಲಿತಾ ಗಣೇಶಯ್ಯ, ಟಿ.ಜಿ ಹರೀಶ್ ಸಂಗೀತ. ನಾಟಕ ಬರೆದಾಡಿಸಿದವರು ಮೈಸೂರು  ರಮಾನಂದ.  https://aratt.ai/@vishwaroopa_news_blog

ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್

ಪ್ಲಾಸ್ಟಿಕ್‌ ಬಳಕೆ ಆರೋಗ್ಯಕ್ಕೆ ಮಾರಕ

ಗಂಗಾವತಿ: ನಗರದ ಪ್ರತಿಷ್ಠಿತ ಸಂಕಲ್ಪ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಅಡಿಯಲ್ಲಿ ಹಿರೇಜಂತಕಲ್ ಹಾಗೂ ವಿಪ್ರ ಪ್ರದೇಶದಲ್ಲಿ ಶ್ರಮದಾನ ಮಾಡುವ ಮೂಲಕ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ವಸ್ತುಗಳನ್ನು ಆಯ್ದು ಪ್ರದೇಶವನ್ನು ಸ್ವಚ್ಛಗೊಳಿಸುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಸಂಕಲ್ಪ ಪದವಿ ಮಹಿಳಾ ಮಹಾವಿದ್ಯಾಲಯ ಕಾರ್ಯಾಧ್ಯಕ್ಷರು ಹಾಗೂ ವಕೀಲರಾದ ನಾಗರಾಜ್ ಗುತ್ತೇದಾರ ಭೇಟಿ ನೀಡಿದರು.

ನಂತರ ಮಾತನಾಡಿದ  ಅವರು, ಪರಿಸರಕ್ಕೆ ಮಾರಕವಾದ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಾವುಗಳೆಲ್ಲ ಸ್ವ ಇಚ್ಛೆಯಿಂದ ತ್ಯಜಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಜೀವನಶೈಲಿಗೆ ಬದಲಾಗಬೇಕಿದೆ. ಆ ಮೂಲಕ ಹಿರಿಯರಿಂದ ಬಳುವಳಿಯಾಗಿ ಬಂದ ಸುಂದರ-ಸ್ವಚ್ಚ ಪರಿಸರವನ್ನು ಯಥಾವತ್ತಾಗಿ ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಸಾಧ್ಯವಾಗುತ್ತದೆ. ನಾಗರೀಕತೆಯ ಬೆಳವಣಿಗೆಯ ಭಾಗವಾಗಿ ದಿನನಿತ್ಯದ ಜೀವನಶೈಲಿಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಅತಿಯಾಗಿ ಅವುಗಳು ಪರಿಸರಕ್ಕೆ ಮತ್ತು ಮಾನವನ ಆರೋಗ್ಯಕ್ಕೆ ತೀವ್ರವಾದ ಹಾನಿಯನ್ನು ಉಂಟುಮಾಡುತ್ತಿವೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ವಸ್ತುಗಳ ಬದಲಾಗಿ ಪರ್ಯಾಯ ಬಳಕೆಯ ಕಡೆಗೆ ನಾವೆಲ್ಲ ಗಮನಹರಿಸುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆಯಬೇಕಾಗಿದೆ ಎಂದು ಕರೆ ನೀಡಿದರು. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಹಲವಾರು ಕಾಯ್ದೆ ಕಾನೂನುಗಳಿದ್ದರೂ ಸಹ ಜನ ಅವುಗಳನ್ನು ಗಮನಿಸದೆ ಮುಂದುವರೆದಲ್ಲಿ ಮಾನವ ಸಂಕುಲ ಅಪಾಯಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಈ ಪವಿತ್ರ ಪರಿಸರದಲ್ಲಿ ವಾಸಿಸುವ ನಾವೆಲ್ಲರೂ ನಮ್ಮ ಸ್ವ-ಇಚ್ಚೆಯಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಹಾಗೂ ನಮ್ಮಗಳ ಆರೋಗ್ಯಯುತ ಜೀವನಕ್ಕೆ ಸಂಕಲ್ಪ ಮಾಡಬೇಕಾಗಿದೆ ಎಂದು ತಿಳಿಸಿದರು.

2021 ಆಗಸ್ಟ್ 12ರಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿದ ಅಧಿಸೂಚನೆಯಂತೆ ರಾಜ್ಯದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧವಿದ್ದರೂ ಅದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವೆಲ್ಲರೂ ರಕ್ಕಸ ಪ್ಲಾಸ್ಟಿಕ್ ಅನ್ನು ತ್ಯಜಿಸಿ ಉತ್ತಮ ಪರಿಸರ ಮತ್ತು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕಿದೆ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ರಮೇಶ್, ಶಿವಶರಣ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿಯಾದ ರಾಹುಲ್ ಉಪಸ್ಥಿತರಿದ್ದರು.    https://aratt.ai/@vishwaroopa_news_blog

ವಾಸವಿ ಮಹಿಳಾ ಮಂಡಳಿ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ.

ಹೆಣ್ಣು ಜಗತ್ತು ಸೃಷ್ಟಿಯ ಪ್ರತೀಕ: ಶ್ರೀಮತಿ ಭಾಗ್ಯ ಈಶ್ವರಶೆಟ್ಟಿ.

ಗಂಗಾವತಿ. ಜನ್ಮದಾತೆಯಿಂದ ಹಿಡಿದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾಣಬಹುದಾದ ಹೆಣ್ಣು ಸೃಷ್ಟಿಯ ಪ್ರತಿಕವಾಗಿ ಗೋಚರಿಸುತ್ತಾಳೆ ಎಂದು ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಭಾಗ್ಯ ಈಶ್ವರಶೆಟ್ಟಿ ಹೇಳಿದರು.

ಅವರು ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ವಾಸವಿ ಮಹಿಳಾ ಮಂಡಳಿ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಹೆಣ್ಣಿನ ಮೇಲೆ ಶೋಷಣೆ ಪ್ರಕರಣಗಳನ್ನು ಗಮನಿಸಿದಾಗ ಭ್ರೂಣ ಹತ್ಯೆಯಿಂದ ಹಿಡಿದು, ಶೋಷಣೆ, ಅತ್ಯಾಚಾರ, ಕೊಲೆ ನಿರಂತರವಾಗಿ ಜರುಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರೂಪರಾಣಿ ರಾಯ್ಕರ್ ಮಾತನಾಡಿ, ಒಲಿದರೆ ನಾರಿ ಮುನಿದರೆ ಮಾರಿ ಎನ್ನುವಂತೆ ಹೆಣ್ಣು ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ಸಮಾಜದ ವಿವಿಧ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇರಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಿಎಂ ರಾಧಿಕಾ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿವಿಧ ಸಂಪ್ರದಾಯಕ ಆಟಗಳು ಹಳೆಯ ನೆನಪುಗಳನ್ನು ಹಂಚಿಕೊಳ್ಳಲಾಯಿತು.

ಸಾಧಕರ ಪರಿಚಯವನ್ನು ವಿನೋದ್ ನೆರವೇರಿಸಿದರು. ಇಲ್ಲೂರ್ ಲಕ್ಷ್ಮಿ ದೇವಿ. ಎಂ ಭಾರತಿ. ಗಾಯಿತ್ರಿ ವಾಸು. ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  https://aratt.ai/@vishwaroopa_news_blog

ಮೂಲ ಸೋಮನಾಥ ಜ್ಯೋತಿರ್ಲಿಂಗ ಮಾರ್ಚ್‌-15 ರಂದು ಗಂಗಾವತಿ ಆಗಮನ: ರಘುನಾಥ ಪವಾರ್‌

ಗಂಗಾವತಿ: 1000 ವರ್ಷದ ಹಿಂದಿನ ಮೂಲ ಸೋಮನಾಥ ಜ್ಯೋತಿರ್ಲಿಂಗವು ಮೊಘಲರ ಆಕ್ರಮಣದಿಂದ ಲುಕ್ತವಾಗಿದದ್ದು ಅದನ್ನು ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಪುನರ್ ಪ್ರತಿಷ್ಠಾಪಿಸಿ ಸಾರ್ವಜನಿಕ ವೀಕ್ಷಣೆಗಾಗಿ ಇಡೀ ಕರ್ನಾಟಕದಾದ್ಯಂತ ಪ್ರತಿ ತಾಲೂಕಿಗೆ ಜ್ಯೋತಿರ್ಲಿಂಗವು ಆಗಮಿಸುತ್ತಿದೆ. ಅದರಂತೆ ನಾಳೆ ರವಿವಾರ ಮಾರ್ಚ್-15 ರಂದು ಬೆಳಗ್ಗೆ ಗಂಗಾವತಿಗೆ ಆಗಮಿಸಲಿದೆ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಗಂಗಾವತಿ ಮುಖ್ಯ ಸಂಚಾಲಕರಾದ ರಘುನಾಥ ರಘುನಾಥ ಪವಾರ್‌ ಪ್ರಕಟಣೆಯಲ್ಲಿ ತಿಳಿಸಿದರು.

ಸನಾತನ ಧರ್ಮದ ಪ್ರಕಾರ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ದೇವಾಲಯವನ್ನು ಸತ್ಯಯುಗದಲ್ಲಿ ಸೋಮ: ಅಂದರೆ ಚಂದ್ರನು ಪ್ರತಿಷ್ಠಾಪಿಸಿದನು ಮತ್ತು ಇಲ್ಲಿ ಶ್ರೀ ಕೃಷ್ಣನು ತಪಸ್ಸು ಮಾಡಿದ್ದನು ಎಂಬ ಪ್ರತೀತಿ ಇದೆ. ಈ ಮೂಲ ಜ್ಯೋತಿರ್ಲಿಂಗವು ಗಾಳಿಯಲ್ಲಿ ತೇಲುತ್ತಿತ್ತು ಎಂದು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಈ ಶಿಲೆಯ ಕೇಂದ್ರ ಭಾಗವು ಅತ್ಯಂತ ಪ್ರಬಲವಾದ ಕಾಂತೀಯ ಶಕ್ತಿಯಿಂದ ಕೂಡಿದೆ. ಕ್ರಿ.ಶ 1026ರಲ್ಲಿ ಮೊಹಮ್ಮದ್ ಘಜನಿಯು ದೇವಾಲಯದ ಮೇಲೆ ಆಕ್ರಮಣ ಮಾಡಿ ಈ ಜ್ಯೋತಿರ್ಲಿಂಗವನ್ನು ಛಿದ್ರಗೊಳಿಸಿದನು. ಶಾಶ್ವತವಾಗಿ ನಷ್ಟವಾಗಿದೆ ಎಂದುಕೊಂಡಂತಹ ಈ ಶಿವಲಿಂಗದ ಭಾಗಗಳನ್ನು ಅಗ್ನಿಹೋತ್ರಿ ಪುರೋಹಿತರು ರಹಸ್ಯವಾಗಿ ತಮ್ಮ ಬಳಿ ಸಂರಕ್ಷಿಸಿದರು. ಅವರು ಈ ಚೂರುಗಳಿಗೆ ಶಿವಲಿಂಗದ ಆಕಾರವನ್ನು ನೀಡಿದರು ಮತ್ತು ಸುಮಾರು ಸಾವಿರ ವರ್ಷಗಳ ಕಾಲ ತಲೆ-ತಲಾಂತರದಿಂದ ಇದನ್ನು ಸಂರಕ್ಷಿಸಿಕೊಂಡು ಬಂದರು.

1924ರಲ್ಲಿ ಕಂಚಿ ಶಂಕರಾಚಾರ್ಯರು ಈ ಅಗ್ನಿಹೋತ್ರಿಗಳಿಗೆ ಈ ಶಿವಲಿಂಗಗಳನ್ನು ನೂರು ವರ್ಷಗಳ ಕಾಲ ಗುಪ್ತವಾಗಿ ಸಂರಕ್ಷಿಸುವಂತೆ ತಿಳಿಸಿದರು ಮತ್ತು ಅದನ್ನು ಗುರುದೇವರಿಗೆ ನೀಡುವಂತೆ ಸೂಚಿಸಿದ್ದರು. ಅದೇ ರೀತಿ ಜನವರಿ 2025 ರಲ್ಲಿ ಅಗ್ನಿಹೋತ್ರಿಗಳು ಈ ಶಿವಲಿಂಗಗಳನ್ನು ಗುರುದೇವರಿಗೆ ಹಸ್ತಾಂತರಿಸಿದರು. ಮಹಾಶಿವರಾತ್ರಿಯಂದು ಜ್ಯೋತಿರ್ಲಿಂಗದ ಈ ಭಾಗಗಳನ್ನು ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ, ಒಂದು ಸಾವಿರ ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ವೀಕ್ಷಣೆಗೆ ಮತ್ತು ದರ್ಶನಕ್ಕೆ ಮುಕ್ತಗೊಳಿಸಲಾಯಿತು.

ಈ ಜ್ಯೋತಿರ್ಲಿಂಗವನ್ನು ಮಾರ್ಚ್‌-15 ರವಿವಾರ ಬೆಳಿಗ್ಗೆ 8 ಗಂಟೆಯಿಂದ 9 ಗಂಟೆರವರೆಗೆ ಹಿರೇಜಂತಕಲ್ ಪ್ರಸನ್ನ ಪಂಪಾಪತಿ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಂತರ ಸಾಯಂಕಾಲ 4:30 ಇಂದ 7:00 ರ ವರೆಗೆ ಶ್ರೀ ಮಲ್ಲಿಕಾರ್ಜುನ ಮಠದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನೋಂದಣಿ ಮಾಡಿಕೊಂಡಂತ ಭಕ್ತರಿಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:30 ಗಂಟೆವರೆಗೆ ಸಂಕಲ್ಪ ರುದ್ರಪೂಜೆ ಮಾಡಿಸಲಾಗುವುದು. ಕಾರಣ ಗಂಗಾವತಿ ನಗರದ ಹಾಗೂ ಸುತ್ತಮುತ್ತಲಿನ ಭಕ್ತರು ಈ ಮೂಲ ಜ್ಯೋತಿರ್ಲಿಂಗ ದರ್ಶನ ಪಡೆದುಕೊಂಡು ಪುನೀತರಾಗಬೇಕೆಂದು ವಿನಂತಿಸಿದ್ದಾರೆ. https://aratt.ai/@vishwaroopa_news_blog

ಅದ್ಧೂರಿಯಾಗಿ ಜರುಗಿದ ಬೆಟ್ಟದ ಲಿಂಗೇಶ್ವರ ಜಾತ್ರಾ ಮಹೋತ್ಸವದ ಜೋಡು ರಥೋತ್ಸವ ಮತ್ತು ಸಾಮೂಹಿಕ ವಿವಾಹಗಳು.

ಗಂಗಾವತಿ: ಮಾರ್ಚ್-11 ರಂದು ತಾಲೂಕಿನ ಚಿಕ್ಕಬೆಣಕಲ್ ಗ್ರಾಮದಲ್ಲಿ 134ನೇ ಬೆಟ್ಟದ ಲಿಂಗೇಶ್ವರರ ಜಾತ್ರಾ ಮಹೋತ್ಸವ ಅಂಗವಾಗಿ ಜೋಡು ರಥೋತ್ಸವ ಅದ್ಧೂರಿಯಾಗಿ ಜರುಗಿತು.

ಹಿಂದಿನ ದಿನ ಅಂದರೆ ಮಾರ್ಚ್-10 ರಂದು 134ನೇ ಪುಣ್ಯತಿಥಿಯ ಅಂಗವಾಗಿ ಪಲ್ಲಕ್ಕಿ ಉತ್ಸವ ಜರುಗಿತು. ಮಾರ್ಚ್-11 ಫಾಲ್ಗುಣ ಬಹುಳ ಅಷ್ಠಮಿ ಬುಧವಾರ ಬೆಳಗಿನ ಜಾವ 5:30ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ತದನಂತರ ಮಹಾಮಂಗಳಾರತಿ, 11:30 ರಿಂದ 12:30 ರವರೆಗೆ ಸಲ್ಲುವ ಅಭಿಜಿನ್ ಲಗ್ನದ ಶುಭಮುಹೂರ್ತದಲ್ಲಿ 11 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಮಹಾಪ್ರಸಾದ ಕಾರ್ಯಕ್ರಮ ಜರುಗಿತು.

 

ಈ ಉತ್ಸವದ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಶ್ರೀ ಮ.ನಿ.ಪ್ರ ಅಭಿನವ ಪ್ರಭು ಮಹಾಸ್ವಾಮಿಗಳು, ಶಾ.ಗ  ಹೂವಿನಹಡಗಲಿ ಶ್ರೀ ಮ.ನಿ.ಪ್ರ. ಹಿರೇಶಾಂತವೀರ ಮಹಾಸ್ವಾಮಿಗಳು, ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಾವನೂರಿನ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸುಳೇಕಲ್ ಬೃಹನ್ಮಠದ ಶ್ರೀಶೀಶ್ರೀ ಭುವನೇಶ್ವರಯ್ಯ ತಾತನವರು, ಉಡುಮಕಲ್ ಹಿರೇಮಠದ ಶ್ರೀ ವೀರಬಸಯ್ಯ ಮಹಾಸ್ವಾಮಿಗಳು ವಹಿಸಿದ್ದರು.

 

ಮುಖ್ಯ ಅತಿಥಿಗಳಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಗಾಲಿ ಜನಾರ್ಧನರೆಡ್ಡಿ , ಮಾಜಿ ವಿಧಾನ ಪರಿಷತ್‌ ಸದಸ್ಯರಾದ  ಹೆಚ್.ಆರ್. ಶ್ರೀನಾಥ್‌, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರು ಪಾಲ್ಗೊಂಡಿದ್ದರು.

 

ಸಂಜೆ 5:00 ಗಂಟೆಗೆ ಸರಿಯಾಗಿ ಶ್ರೀ ಬೆಟ್ಟದೇಶ್ವರ ಹಾಗೂ ಶ್ರೀ ಲಿಂಗೇಶ್ವರರ ಜೋಡು ರಥೋತ್ಸವವು ಭಕ್ತರ ಸಮೂಹದಲ್ಲಿ ಅದ್ಧೂರಿಯಾಗಿ ಜರುಗಿತು.

ಅದೇರೀತಿ ಇಂದು ಸಾಯಂಕಾಲ ಕಡುಬಿನ ಕಾಳಗ ನಡೆಯಿತು. https://aratt.ai/@vishwaroopa_news_blog

VISHWAROOPA NEWS BLOG

Infinite

Skip to content ↓